ಶ್ರೀಯು.ಎಂ.ಡ್ರೀಮ್ಸ್ ಮೂವೀಸ್ ಸಂಸ್ಥೆ ಲಾಂಛನದಲ್ಲಿ ಮಹೇಶ್ ಆನೇಕಲ್ ಅವರು ನಿರ್ಮಿಸುತ್ತಿರುವ ‘ಮನದ ಮರೆಯಲ್ಲಿ’ ಚಿತ್ರ ಕಳೆದವಾರ ಕಂಠೀರವ ಸ್ಟೂಡಿಯೋದಲ್ಲಿ ಆರಂಭವಾಯಿತು. ನಾಯಕ ಹಾಗೂ ನಾಯಕಿಯ ಮೇಲೆ ಸೆರೆಹಿಡಿಯಲಾದ ಪ್ರಥಮ ಸನ್ನಿವೇಶಕ್ಕೆ ನಟ ರಾಘವೇಂದ್ರರಾಜಕುಮಾರ್ ಆರಂಭಫಲಕ ತೋರಿದರು. ಬೇಬಿ ಪಲ್ಲವಿ ಕ್ಯಾಮೆರಾ ಚಾಲನೆ ಮಾಡಿದರು. ಅಜಯ್ರಾವ್, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಎಂ.ಎನ್.ಸುರೇಶ್, ಅಮರನಾರಾಯಣ್(ಐ ಎ ಎಸ್), ದಿನೇಶ್ಗಾಂಧಿ, ಕರಿಸುಬ್ಬು ಮುಂತಾದವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು. ಆನೇಕಲ್ನ ರಾಜಪುರ ಸಂಸ್ಥಾನ ಮಠಾಧೀಶರಾದ ಶ್ರೀಶ್ರೀರಾಜೇಶ್ವರಶಿವಾಚಾರ್ಯಸ್ವಾಮೀಜಿ ಆಶೀರ್ವದಿಸಿದರು
ವರನಟ ಡಾ:ರಾಜ್ಕುಮಾರ್ ಈ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿಯಂತೆ. ಅವರ ಸರಳತೆ ಹಾಗೂ ನೇತ್ರದಾನ ಮಹಾದಾನ ಎಂಬ ತತ್ವದ ನಂಬಿಕೆಯೇ ಈ ಚಿತ್ರ ಮಾಡುವದಕ್ಕೆ ಕಾರಣ ಎನ್ನುತ್ತಾರೆ ನಿರ್ದೇಶಕ ಎ.ಎಚ್.ರಾಜೀವ್ನೇತ್ರ. ಬಿ.ಮಲ್ಲೇಶ್, ಎಚ್.ವಾಸು, ರಾಜಕಿಶೋರ್ ಮುಂತಾದ ನಿರ್ದೇಶಕರ ಬಳಿ ಸಹಾಯಕರಾಗಿದ್ದ ಅನುಭವವಿರುವ ರಾಜೀವ್ ಅವರಿಗೆ ಇದು ಚೊಚ್ಚಲ ಚಿತ್ರ.
‘ಒಲವೇ ಮಂದಾರ’ದ ಶ್ರೀಕಾಂತ್ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ವಿಂಧ್ಯಾ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನವೀನ್ಸುವರ್ಣ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಎಂ.ಎಸ್.ತ್ಯಾಗರಾಜ್ ಸಂಗೀತ ನೀಡುತ್ತಿದ್ದಾರೆ. ಎಂ.ಯೋಗೇಂದ್ರ ನೃತ್ಯ ನಿರ್ದೇಶನ ಹಾಗೂ ಎನ್.ಕೆ.ಕುಮಾರ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಬೆಂಗಳೂರು, ಮಡಿಕೇರಿಯಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.